ಪಿ.ದಯಾನಂದ ಪೈ, ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ : ಯಕ್ಷಮಂಗಳ ಕೃತಿ ಪ್ರಶಸ್ತಿ ಪ್ರದಾನ
ಲೇಖಕರು : ಉದಯವಾಣಿ
ಬುಧವಾರ, ಒಕ್ಟೋಬರ್ 15 , 2014
|
ಒಕ್ಟೋಬರ್ 15, 2014
|
ಪಿ.ದಯಾನಂದ ಪೈ, ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ : ಯಕ್ಷಮಂಗಳ ಕೃತಿ ಪ್ರಶಸ್ತಿ ಪ್ರದಾನ
ಉಳ್ಳಾಲ :
ಮಂಗಳೂರು ವಿಶ್ವವಿದ್ಯಾನಿಲಯದ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ಪ್ರಶಸ್ತಿ ಹಾಗೂ ಯಕ್ಷಮಂಗಳ ಕೃತಿ ಪ್ರಶಸ್ತಿ ಪ್ರದಾನ ಸಮಾರಂಭ ಗುರುವಾರ ಮಂಗಳೂರು ವಿ.ವಿ.ಯ ಮಂಗಳ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಿದ್ವಾಂಸ ಹಾಗೂ ಪ್ರಸಂಗಕರ್ತ ಪ್ರೊ| ಅಮೃತ ಸೋಮೇಶ್ವರ ಮತ್ತು ನಾಟ್ಯಗುರು, ಕಲಾವಿದ ಗುರು ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಯಕ್ಷಮಂಗಳ ಪ್ರಶಸ್ತಿ, ಡಾ| ರಾಘವ ನಂಬಿಯಾರ್ ಅವರ 'ಹಿಮ್ಮೇಳ' ಕೃತಿಗೆ ಯಕ್ಷಮಂಗಳ ಕೃತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯ ಕ್ರೀಡಾ ಮತ್ತು ಯುವಜನ ಸೇವಾ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕ ವಲಯವಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಇದರ ಹಿಂದೆ ಟಿ.ಎಂ.ಎ. ಪೈ ಅವರ ದೂರದರ್ಶಿತ್ವ ಇದೆ. ಶೈಕ್ಷಣಿಕವಾಗಿ ಹಿಂದುಳಿದಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಅವರು ಕ್ರಾಂತಿ ಮಾಡಿದರು. ಇದರೊಂದಿಗೆ ಮೂಡಬಿದಿರೆ, ಕುಂದಾಪುರಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅದನ್ನು ಅಲ್ಲಿನ ಜನರಿಗೆ ಸಮರ್ಪಿಸುವ ಮೂಲಕ ದೊಡ್ಡ ಗುಣ ಮೆರೆದಿದ್ದಾರೆ ಎಂದರು.
ನಿಜವಾದ ಕಲಾವಿದರು
ಪ್ರಶಸ್ತಿ ಸಮಿತಿ ಅಧ್ಯಕ್ಷ, ಹಿರಿಯ ಯಕ್ಷಗಾನ ಕಲಾವಿದ ಪ್ರೊ| ಎಂ.ಎಲ್. ಸಾಮಗ ಅಭಿನಂದನಾ ಭಾಷಣ ಮಾಡಿ, ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ಪ್ರಶಸ್ತಿ ಹಾಗೂ ಯಕ್ಷಮಂಗಳ ಕೃತಿ ಪ್ರಶಸ್ತಿ¤ ಪಡೆದವರು ಯಕ್ಷಗಾನದ ನಿಜವಾದ ಕಲಾವಿದರು. ಯಕ್ಷಗಾನವನ್ನು ಉಳಿಸಿ, ಬೆಳೆಸಿ, ಮುಂದಿನ ತಲೆಮಾರಿಗೆ ಪಾರಂಪರಿಕ ನೆಲೆಯಲ್ಲಿ ಹಸ್ತಾಂತರಿಸುತ್ತಿರುವ ಕೆಲಸ ಮಾಡುತ್ತಿರುವ ಈ ಮೂವರು ಸಾಧಕರು ನಿಜಕ್ಕೂ ಅಭಿನಂದನಾರ್ಹರು ಎಂದರು.
ಕಲಾಕಾರರನ್ನು ಮೊದಲು ಗೌರವಿಸಿ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಾಯೋಜಕ ಡಾ| ಪಿ. ದಯಾನಂದ ಪೈ, ತಮ್ಮ ಬಾಲ್ಯ ಜೀವನ ನೆನಪಿಸಿಕೊಂಡು ಯಕ್ಷಗಾನದಂತಹ ಶ್ರೀಮಂತ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕಲಾಕಾರರನ್ನು ಮೊದಲಾಗಿ ಗೌರವಿಸಬೇಕು ಎಂದರು.
ಸಾಹಿತ್ಯದ ಕೃಷಿಗೆ ಯಕ್ಷಗಾನ ಪ್ರೇರಣೆ
ಯಕ್ಷಮಂಗಳ ಪ್ರಶಸ್ತಿಗೆ ಪಾತ್ರರಾದ ಪ್ರೊ| ಅಮೃತ ಸೋಮೇಶ್ವರ ಮಾತನಾಡಿ, ಯಕ್ಷಗಾನಕ್ಕೆ ಖಚಿತವಾದ ಉಚಿತ ಸ್ಥಾನ ಸಿಕ್ಕಿರುವುದು, ಯಕ್ಷಗಾನದ ಸದಭಿಮಾನಿಗಳು ಮಂಗಳೂರು ವಿವಿಯಲ್ಲಿರುವುದು ಶ್ಲಾಘನೀಯ. ಸಾಹಿತ್ಯದ ಕೃಷಿ ಮಾಡಲು ನನಗೆ ಪ್ರೇರಣೆಯಾದದ್ದೇ ಯಕ್ಷಗಾನ ಎಂದರು.
ಯಕ್ಷಮಂಗಳ ಪ್ರಶಸ್ತಿ ಪುರಸ್ಕೃತರಾದ ನಾಟ್ಯಗುರು, ಕಲಾವಿದ ಗುರು ಬನ್ನಂಜೆ ಸಂಜೀವ ಸುವರ್ಣ, ಯಕ್ಷಮಂಗಳ ಕೃತಿ ಪ್ರಶಸ್ತಿ ಪುರಸ್ಕೃತ ಡಾ| ರಾಘವ ನಂಬಿಯಾರ್ ಅಭಿನಂದನೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಉಪ ಕುಲಪತಿ ಪ್ರೊ| ಕೆ. ಭೈರಪ್ಪ ಮಾತನಾಡಿ ಮಂಗಳೂರು ವಿವಿಯಲ್ಲಿ ನ್ಯೂಟ್ರಿನೋ ರಿಸರ್ಚ್ಗೆ ಅವಕಾಶ ಸಿಕ್ಕರೆ ಅದನ್ನು ಅಳವಡಿಸುತ್ತೇವೆ. ಫೈನ್ ಅರ್ಟ್ಸ್ ಸ್ಕೂಲ್ ಆರಂಭಿಸುವ ಮೂಲಕ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್ ಆರಂಭಿಸುವ ಯೋಜನೆ ಇದ್ದು, ಆ ಮೂಲಕ ಹಲವು ಕಲಾವಿದರಿಗೆ ಅವಕಾಶ ಮಾಡಿಕೊಡಲಿದ್ದೇವೆ ಎಂದರು. ಪ್ರೊ| ಪಾದೆಕಲ್ಲು ವಿಷ್ಣು ಭಟ್ ಮಾತನಾಡಿದರು.
ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ| ಕೆ. ಚಿನ್ನಪ್ಪ ಗೌಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ರಾಜಶ್ರೀ ಕಾರ್ಯಕ್ರಮ ನಿರೂಪಿಸಿದರು.
ಕೃಪೆ :
http://www.udayavani.com
|
|
|